ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಪ್ರಾವೀಣ್ಯತೆ ಪಡೆದು,ಕೀರ್ತನ ಕಲೆಯನ್ನು ಪ್ರಪಂಚದಾದ್ಯಂತ ಪ್ರಚುರಗೊಳಿಸಿದವರು ಭದ್ರಗಿರಿ ಕೇಶವದಾಸರು.(ಜನನ:ಜುಲೈ ೨೨,೧೯೩೪ - ಮರಣ:ಡಿಸೆಂಬರ್ ೧೨,೧೯೯೭)ಇವರು ಹುಟ್ಟಿದ್ದು ಭದ್ರಗಿರಿಯಲ್ಲಿ.ತಂದೆ ವೆಂಕಟರಮಣ ಪೈ,ತಾಯಿ ರುಕ್ಮಿಣಿಬಾಯಿ. == ಹರಿಕಥಾ ಆಸಕ್ತಿ == ಶಾಲೆಯಲ್ಲಿ ಓದುತ್ತಿದ್ದಾಗಲೇ 'ಇಂದ್ರಸೇನರಾಜನ ಕಥೆ'ಯನ್ನು ಹರಿಕಥೆಯ ರೂಪದಲ್ಲಿ ನಿರೂಪಿಸಿ,ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.ಪದವಿ ಪರೀಕ್ಷೆಗೆ ಓದುತ್ತಿದ್ದಾಗ ಬೇಸಿಗೆಯ ರಜೆಯಲ್ಲಿ ಹರಿಕಥೆ ಮಾಡುತ್ತಿದ್ದರು.ಅನೇಕ ಕಡೆ ಹರಿಕಥಾ ಕೀರ್ತನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.ಹೀಗೆ ಸಂಗ್ರಹವಾದ ಹಣದಿಂದಲೇ ಮುಂದೆ ಬೆಂಗಳೂರಿನ ರಾಜಾಜಿನಗರದಲ್ಲಿ 'ದಾಸಾಶ್ರಮ' ಸ್ಥಾಪನೆ ಮಾಡಿದರು. == ಸಾಧನೆಗಳು == ಇವರು ನಡೆಸಿದ 'ಕರ್ನಾಟಕ ಕೀರ್ತನಕಾರರ ಸಮ್ಮೇಳನ' ಅಂದಿನ ಮೈಸೂರು ಮಹಾರಾಜರಿಂದ ಉದ್ಘಾಟನೆ ಆಯಿತು.೧೯೬೬ರಲ್ಲಿ ಹರಿಕಥಾ ಕೀರ್ತನ ಕಾರ್ಯಕ್ರಮ ನಡೆಸಿಕೊಡಲು ವಿಶ್ವ ಪರ್ಯಟನೆ ಮಾಡಿದರು.ಬೆಂಗಳೂರಿನ ಸಮೀಪವಿರುವ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ವಿಶ್ವ ಶಾಂತಿ ಆಶ್ರಮ ಸ್ಥಾಪನೆ ಮಾಡಿದ್ದಾರೆ.ಇಲ್ಲಿ ೩೨ ಅಡಿಗಳ ಭವ್ಯವಾದ 'ವಿಜಯ ವಿಠ್ಠಲ'ನ ಮೂರ್ತಿಯನ್ನು ಸ್ಥಾಪನೆ ಮಾಡಿದ್ದಾರೆ.ಈ ಸ್ಥಳ ಈಗ ಇಂತಹ ಇನ್ನೂ ಅನೇಕ ಮನೋಹರ ಮೂರ್ತಿಗಳ ಕೆತ್ತನೆಗಳನ್ನೊಳಗೊಂಡ ಆಕರ್ಷಕ ಪ್ರವಾಸೀ ತಾಣವಾಗಿದೆ. == ರಚನೆಗಳು == ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.ಹರಿಕಥಾಪ್ರಸಂಗಗಳ ನಿರೂಪಣೆಯ ನೂರಾರು ಧ್ವನಿಸುರುಳಿಗಳು ಬಿಡುಗಡೆಯಾಗಿವೆ. == ಬಿರುದು,ಪ್ರಶಸ್ತಿಗಳು == ಇವರಿಗೆ ಹರಿಕಥಾ ಕಲಾವಿಚಕ್ಷಣ ,ಕೀರ್ತನ ಕೇಸರಿ ,ಕೀರ್ತನ ನಾಟಕ ವಿಶಾರದ..ಮೊದಲಾದ ಬಿರುದುಗಳು ಸಂದಿವೆ.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ,ರಾಜ್ಯೋತ್ಸವ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.